ಸಾಜಿದ್ ಕುರೇಶಿ ನಿರ್ಮಾಣದ, ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ‘ನಾಗರಹಾವು ಚಿತ್ರ ಸಾಹಸಸಿಂಹ ವಿಷ್ಣವರ್ಧನ್ ಇರುವಿಕೆಯೂ ಸೇರಿದಂತೆ ನಾನಾ ಕಾರಣಗಳಿಂದ ಭರ್ಜರಿ ಕುತೂಹಲ ಉಂಟುಮಾಡುತ್ತಿದೆ. ಪ್ರೇಕ್ಷಕರು ಚಿತ್ರ ಬಿಡುಗಡೆ ಯಾವತ್ತು ಅಂತ ತುದಿಗಾಲಲ್ಲಿ ನಿಂತಿದ್ದರೆ, ಇತ್ತ ಚಿತ್ರತಂಡ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತಷ್ಟು ಪ್ರಯತ್ನ ನಡೆಸುತ್ತಲೇ ಇದೆ.
ಅದರ ಭಾಗವಾಗಿ ಇದೀಗ ಭಾಕ್ಸಾಫೀಸ್ ಸುಲ್ತಾನ್ ದರ್ಶನ್ ನಾಗರಹಾವಿಗೆ ಜೊತೆಯಾಗುತ್ತಿದ್ದಾರೆ!
ವಿಷ್ಣುವರ್ಧನ್ ಅವರಿಗೆ ಅರ್ಪಿಸಲೆಂದೇ ತಯಾರಾಗುತ್ತಿರುವ ವಿಶೇಷ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಈ ಹಾಡಿಗೆ ಸಕಲ ತಯಾರಿಗಳೂ ನಡೆದಿವೆ. ಕವಿರಾಜ್ ರಚಿಸಿರುವ ಹಾಡಿಗೆ ಗುರುಕಿರಣ್ ಮೋಡಿ ಮಾಡುವಂಥಾ ಸಂಗೀತ ನೀಡಿದ್ದಾರೆ. ವಿಶೇಷ ಗೀತೆಗೆ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.
ಅಂದಹಾಗೆ ಈ ಹಾಡಿನ ಚಿತ್ರೀಕರಣ ಸೆಪ್ಟೆಂಬರ್ ೨ ಮತ್ತು ೩ರಂದು ಮೈಸೂರಿನ ಮಹಾರಾಜ ಗ್ರೌಂಡಿನಲ್ಲಿ ನಡೆಯಲಿದೆ. ಇದರಲ್ಲಿ ಒಟ್ಟು ಮುನ್ನೂರು ನೃತ್ಯಪಟುಗಳು ದರ್ಶನ್ ಜೊತೆ ಹೆಜ್ಜೆ ಹಾಕಲಿದ್ದಾರೆ.
ನಾಗರಹಾವು ಚಿತ್ರ ಇಂಥಾ ಹೊಸಾ ಪ್ರಯೋಗಗಳ ಮೂಲಕವೇ ಮತ್ತಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಸರಳವಾಗಿ ಆಡಿಯೋ ಬಿಡುಗಡೆ ಮಾಡಿ, ಬಡ ರೋಗಿಗಳಿಗೂ ಸಹಾಯ ಮಾಡುವ ಮೂಲಕ ಸದ್ದು ಮಾಡಿರುವ ಚಿತ್ರ ತಂಡ ಇನ್ನೇನು ನಾಗರಹಾವನ್ನು ತೆರೆಗಾಣಿಸಲು ಉತ್ಸುಕವಾಗಿದೆ.